ಹಾಸನ: ಬಟ್ಟೆ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಮಾರಕಾಸ್ತ್ರ ಬೀಸಿದ ಮಾನಸಿಕ ಅಸ್ವಸ್ಥ- ಆರೋಪಿಗಾಗಿ ಪೊಲೀಸರ ಶೋಧ

ಹಾಸನ: ನಗರದ ಗಾಂಧಿ ಬಜಾರ್ ನಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ದಿಢೀರ್ ನುಗ್ಗಿದ ಮಾನಸಿಕ ಅಸ್ವಸ್ಥನೊಬ್ಬ ಮಾರಕಾಸ್ತ್ರದಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಂದು ರಾತ್ರಿ ನಡೆದಿದೆ.

ಹಲ್ಲೆ ನಡೆದ ಅಂಗಡಿ

ರಾಹುಲ್ ಸೆಲೆಕ್ಷನ್ ಎಂಬ ಬಟ್ಟೆ ಅಂಗಡಿ ಮಾಲೀಕ ಜೀತುಕುಮಾರ್ ಅವರ ಭುಜಕ್ಕೆ ಗಂಭೀರ ಗಾಯವಾಗಿದ್ದು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀತುಕುಮಾರ್ ಭುಜಕ್ಕೆ ತೀವ್ರ ಗಾಯವಾಗಿದೆ

ಅಂಗಡಿಯಲ್ಲಿ ಕುಳಿತಿದ್ದ ಜೀತುಕುಮಾರ್ ಅವರ ಬಳಿಗೆ ಬಂದ ಆಗಂತುಕ ಮಾರಕಾಸ್ತ್ರದಿಂದ ಭುಜ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾದನು.

ದಿಢೀರ್ ನಡೆದ ದುರ್ಘಟನೆಯಿಂದ ಎಚ್ಚೆತ್ತ ಅಂಗಡಿ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು.

ಪೊಲೀಸರಿಂದ ಪರಿಶೀಲನೆ

ಘಟನೆಯಿಂದ ಗಾಂಧಿ ಬಜಾರ್ ಪ್ರದೇಶದಲ್ಲಿ ವರ್ತಕರು ಆತಂಕಗೊಂಡಿದ್ದಾರೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಆರೋಪಿ ಮುಖಚಹರೆ ಸ್ಪಷ್ಟವಾಗಿ ದಾಖಲಾಗಿದ್ದು, ಆತನ ಪತ್ತೆಗೆ ಯತ್ನ ಆರಂಭಿಸಿದ್ದಾರೆ.