ನಗರಸಭೆ ಅವಿಶ್ವಾಸ ಮಂಡನೆ ಸಭೆ: ಜೆಡಿಎಸ್ ವರಿಷ್ಠರಿಗೆ ಅಧ್ಯಕ್ಷರ ತಿರುಮಂತ್ರ, ಕಾಂಗ್ರೆಸ್-ಬಿಜೆಪಿ ಜಂಟಿ ಕಾರ್ಯತಂತ್ರ?

ಹಾಸನ:  ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕುವೆಂಪು ಸಭಾಂಗಣದಲ್ಲಿ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಒಗ್ಗೂಡಿದ್ದು, ಜೆಡಿಎಸ್‌ನ ರಾಜಕೀಯ ತಂತ್ರಕ್ಕೆ ತಿರುಗುಬಾಣ ಹೂಡಲು ಸಜ್ಜಾಗಿದ್ದಾರೆ.

ಹಾಲಿ ಅಧ್ಯಕ್ಷ ಎಂ.ಚಂದ್ರೇಗೌಡ ಅವರು 12 ಬಿಜೆಪಿ ನಗರಸಭೆ ಸದಸ್ಯರ ಜೊತೆ ಸಭೆಗೆ ಆಗಮಿಸಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ ಸದಸ್ಯರೊಂದಿಗೆ ಸಂಸದ ಶ್ರೇಯಸ್‌ ಪಟೇಲ್‌ ಕೂಡ ಸಭೆಯಲ್ಲಿ ಭಾಗವಹಿಸಿದ್ದಾರೆ.

ಆದರೆ, ಜೆಡಿಎಸ್‌ನ ನಗರಸಭೆ ಸದಸ್ಯರು ಇನ್ನೂ ಸಭೆಗೆ ಆಗಮಿಸಿಲ್ಲ, ಇದು ರಾಜಕೀಯ ಕುತೂಹಲವನ್ನು ಹೆಚ್ಚಿಸಿದೆ. ಜೆಡಿಎಸ್‌ನ ಯೋಜನೆಯನ್ನು ವಿಫಲಗೊಳಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಒಂದಾಗಿರುವುದು ಸ್ಪಷ್ಟವಾಗಿದ್ದು, ಕೆಲವೇ ಕ್ಷಣಗಳಲ್ಲಿ ಅವಿಶ್ವಾಸ ನಿರ್ಣಯದ ಮತದಾನ ನಡೆಯಲಿದೆ. ಈ ಸಭೆಯ ಫಲಿತಾಂಶ ಹಾಸನ ನಗರಸಭೆಯ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.