ಹಾಸನ, ಏಪ್ರಿಲ್ 21: ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ-ಮಾನವ ಸಂಘರ್ಷ ಮತ್ತೊಮ್ಮೆ ತಲೆದೋರಿದೆ.
ವಾಯುವಿಹಾರಕ್ಕೆ ತೆರಳಿದ್ದ ಗ್ರಾಮದ ವೃದ್ಧ ರಾಜು (68) ಎಂಬಾತನ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ನಡೆಸಿದೆ. ಕಾಡಾನೆಯು ರಾಜುವನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ, ತುಳಿಯಲು ಯತ್ನಿಸಿದೆ. ಘಟನೆಯಲ್ಲಿ ಆತ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಸಮಯದಲ್ಲಿ ಸ್ಥಳೀಯರು ಕಿರುಚಾಡಿದ್ದರಿಂದ ಕಾಡಾನೆ ಕಾಫಿ ತೋಟದೊಳಗೆ ಪರಾರಿಯಾಗಿದೆ. ಗಾಯಗೊಂಡ ರಾಜು ಅವರನ್ನು ಗ್ರಾಮಸ್ಥರು ಕೂಡಲೇ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ, ಕಾಡಾನೆಯ ಚಲನವಲನವನ್ನು ಗಮನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯರು ಭಯಭೀತರಾಗಿದ್ದಾರೆ.