ಹಾಸನ, ಮೇ 03, 2025: ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಎರಡನೇ ದಿನದ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಅಡಕ-ಬಡಕ’ ಹೆಸರಿನ ಪುಂಡಾನೆಯನ್ನು ಅರಣ್ಯ ಇಲಾಖೆಯ ತಂಡವು ಪಾರ್ವತಮ್ಮನ ಬೆಟ್ಟದ ಬಳಿ ಸೆರೆ ಹಿಡಿದಿದೆ.
ಬೆಳಿಗ್ಗೆಯೇ ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್) ಸಿಬ್ಬಂದಿ ಕಾಡಾನೆಯ ಸ್ಥಳವನ್ನು ಪತ್ತೆ ಹಚ್ಚಿದ್ದರು. ವೈದ್ಯರ ತಂಡವು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ನಂತರ, ದೈತ್ಯಾಕಾರದ ಆನೆ ಸ್ವಲ್ಪ ದೂರ ಓಡಿ ಪ್ರಜ್ಞೆ ತಪ್ಪಿ ಬಿದ್ದಿತು. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಿ, ಕಾಲಿಗೆ ಹಗ್ಗ ಕಟ್ಟಿದರು. ನಂತರ ವೈದ್ಯರು ರಿವರ್ಸಲ್ ಇಂಜೆಕ್ಷನ್ ನೀಡಿದಾಗ, ಎಚ್ಚರಗೊಂಡ ಕಾಡಾನೆ ಘೀಳಿಟ್ಟು ಅಬ್ಬರಿಸಿತು,
ಈ ಮೂಲಕ ಸಾಕಾನೆಗಳಿಗೆ ಸವಾಲು ಒಡ್ಡಿತು. ಕಾರ್ಯಾಚರಣೆಯಲ್ಲಿ ಕಂಜನ್, ಕರ್ನಾಟಕ ಭೀಮ, ಮಹೇಂದ್ರ, ಧನಂಜಯ, ಏಕಲವ್ಯ ಮತ್ತು ಸುಗ್ರೀವ ಸಾಕಾನೆಗಳು ಭಾಗವಹಿಸಿದ್ದವು. ಈ ಆನೆಗಳು ಕಾಡಾನೆಯನ್ನು ಎಳೆದು ತರಲು ಹರಸಾಹಸಪಟ್ಟವು. ಕಾರ್ಯಾಚರಣೆಯನ್ನು ಡಿಎಫ್ಓ ಸೌರಭ್ಕುಮಾರ್ ಮತ್ತು ಆರ್ಎಫ್ಓ ಹೇಮಂತ್ ನೇತೃತ್ವದಲ್ಲಿ ನಡೆಸಲಾಯಿತು.