ಹಾಸನ: ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರೊಂದಿಗೆ ನಡೆದ ಜಟಾಪಟಿಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಚಿನ್ನದ ಬ್ರೈಸ್ಲೈಟ್ ಕಳೆದುಕೊಂಡು ಪರದಾಡಿದರು. ಕೆಲ ಸಮಯದ ಹುಡುಕಾಟದ ನಂತರ ಆಭರಣ ದೊರಕಿ ನಿಟ್ಟುಸಿರು ಬಿಟ್ಟರು.
ಬಿಜೆಪಿ ಕಾರ್ಯಕರ್ತ ಅನೂಪ್ ರಾಜ್ 35 ಗ್ರಾಂ ತೂಕದ ಚಿನ್ನದ ಬ್ರೈಸ್ಲೈಟ್ ಕಳೆದುಕೊಂಡಿದ್ದವರು. ಡಿ.ಕೆ.ಸುರೇಶ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ನಂತರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು.

ಆದರೆ ಪೊಲೀಸರ ಆ ಪ್ರಯತ್ನವನ್ನು ವಿಫಲಗೊಳಿಸಲು ಬಲಪ್ರಯೋಗಿಸಿದರು. ಆಗ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು. ಕಡೆಗೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ವಾಹನಕ್ಕೆ ಹತ್ತಿಸಿದರು.
ಆಗ ಅನೂಪ್ ರಾಜ್ ಅವರಿಗೆ ತಮ್ಮ ಕೈಲಿದ್ದ ಬ್ರೈಸ್ಲೈಟ್ ಇಲ್ಲದಂತಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮನವಿ ಮಾಡಿ ವಾಹನದಿಂದ ಕೆಳಗಿಳಿದು ಬ್ಲೈಸ್ಲೈಟ್ ಗಾಗಿ ಹುಡುಕಾಡಿದರು. ಕೆಲ ಸಮಯದ ಹುಡುಕಾಟದ ಸ್ನೇಹಿತನ ಪ್ಯಾಂಟ್ ಗೆ ಸಿಕ್ಕಿಕೊಂಡಿದ್ದ ಆಭರಣ ದೊರಕಿತು. ನಂತರ ಪೊಲೀಸರು ಅವರನ್ನು ಅಲ್ಲಿಂದ ಕರೆದೊಯ್ದರು.