ಹಾಸನ: ಸರ್ಕಾರಿ ನೌಕರನ ಅನುಮಾನಾಸ್ಪದ ಸಾವು- ಪತ್ನಿ ಕುಟುಂಬದವರು ಕೊಲೆ ಮಾಡಿದ್ದಾರೆಂದು ಆರೋಪಿಸಿದ ಸಂಬಂಧಿಕರು

ಹಾಸನ, ಏಪ್ರಿಲ್ 29, 2025:  ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ತಾಲ್ಲೂಕು ಕಚರಿ ಸಿಬ್ಬಂದಿಯೊಬ್ಬರ ಅನುಮಾನಾಸ್ಪದ ಸಾವಿನ ಘಟನೆ ನಡೆದಿದ್ದು, ಮೃತನ ಕುಟುಂಬಸ್ಥರು ಕೊಲೆಯ ಆರೋಪವನ್ನು ಮಾಡಿದ್ದಾರೆ.

ಹೊಳೆನರಸೀಪುರ ತಾಲ್ಲೂಕು ಕಚೇರಿಯ ರೆಕಾರ್ಡ್ ರೂಂ ಸಿಬ್ಬಂದಿಯಾಗಿದ್ದ ಸತೀಶ್ (43) ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ (ಏಪ್ರಿಲ್ 28) ಬೆಳಿಗ್ಗೆ ಸತೀಶ್ ಅವರಿಗೆ ಅನಾರೋಗ್ಯವಾಗಿ ಆಸ್ಪತ್ರೆಗೆ ಸೇರಿಸಿರುವುದಾಗಿ ಪತ್ನಿಯ ಕುಟುಂಬದವರು ಕರೆ ಮಾಡಿದ್ದರು. ಆದರೆ ಆಸ್ಪತ್ರೆಗೆ ಹೋದಾಗ ಸತೀಶ್ ತಲೆಗೆ ಪೆಟ್ಟಾಗಿ ಮೃತಪಟ್ಟಿರುವುದು ಕಂಡುಬಂದಿದೆ. ತಲೆಗೆ ಗಂಭೀರ ಗಾಯವಾಗಿರುವ ಸತೀಶ್‌ರ ಸಾವಿಗೆ ಕೌಟುಂಬಿಕ ಕಲಹವೇ ಕಾರಣವೆಂದು ಶಂಕಿಸಲಾಗಿದೆ.

ಸತೀಶ್‌ರ ಪತ್ನಿ ವಿದ್ಯಾ ಅವರ ಕಡೆಯವರು ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ: ಮೂಲತಃ ಹೊಳೆನರಸೀಪುರ ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದವರಾದ ಸತೀಶ್, 15 ವರ್ಷಗಳ ಹಿಂದೆ ಹಾಸನದ ವಿದ್ಯಾ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಯ ನಡುವೆ ಕೆಲವು ದಿನಗಳಿಂದ ಕೌಟುಂಬಿಕ ವಿವಾದಗಳಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸತೀಶ್‌ರ ಸಾವು ಕೊಲೆಯೆಂದು ಆರೋಪಿಸಿರುವ ಕುಟುಂಬಸ್ಥರು, ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.